Showing posts with label Accident kannada. Show all posts
Showing posts with label Accident kannada. Show all posts

Thursday, 1 May 2008

ಬಾ ಮಳೆಯೇ ಬಾ...


ಬಾ ಮಳೆಯೇ ಬಾ, ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೇ, ಹಿಂತಿರುಗಿ ಹೋಗದಂತೇ ಬಿಡದೆ ಬಿರುಸಾಗಿ ಸುರಿ.

ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ ಅವಳಿಲ್ಲಿ ಬಂದೊಡನೆ
ನಿಲ್ಲು ಕಾಲವೆ ನಿಲ್ಲು ನಮ್ಮ ತೆಕ್ಕೆ ಸಡಿಲಾಗದಂತೆ
ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ.

ಬೀಸು ಗಾಳಿಯೇ ಬೀಸು ನನ್ನೆದೆಯ ಆಸೆಗಳ
ಬೀಸು ಗಾಳಿಯೇ ಬೀಸು ನನ್ನೆದೆಯ ಆಸೆಗಳ
ನಲ್ಲೆ ಹೃದಯಕ್ಕೆ ತಲುಪಿಸು ಹಾಸು ಹೂಗಳ ಹಾಸು
ಅವಳು ಬರುವ ದಾರಿಯಲ್ಲಿ ಕಲ್ಲುಗಳು ತಾಗದಂತೆ
ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ.

ಬೀರು ದೀಪವೆ ಬೀರು ನಿನ್ನ ಹೊಂಬೆಳಕಲ್ಲಿ
ಬೀರು ದೀಪವೆ ಬೀರು ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ ಆರು ಬೇಗನೆ ಆರು
ಶೃಂಗಾರ ಶಯ್ಯೆಯಲ್ಲಿ ನಾಚಿ ನೀರಾಗುವಂತೆ
ಬಾ ಮಳೆಯೇ ಬಾ ಬಿಡದೆ ಬಿರುಸಾಗಿ ಸುರಿ ನಲ್ಲೆ ಹಿಂತಿರುಗಿ ಹೋಗದಂತೆ.


ಚಿತ್ರ: ಆಕ್ಸಿಡೆಂಟ್
ಬರೆದವರು: ಬಿ.ಆರ್. ಲಕ್ಷ್ಮಣ್ ರಾವ್